ಪ್ರಸಂಗಕರ್ತೆಯಾಗಿ ಮಿಂಚಿದ ಸುರೇಖಾ ಆಚಾರ್ಯ
ಲೇಖಕರು : ವಿಲಾಸ್ ಕುಮಾರ್ ನಿಟ್ಟೆ, ಕಾರ್ಕಳ
ಶನಿವಾರ, ಜನವರಿ 11 , 2014
|
ಗಂಡುಕಲೆ ಎಂದು ಹೆಸರಾದ ಯಕ್ಷಗಾನ ಕ್ಷೇತ್ರದಲ್ಲಿ ಈಗ ಸದ್ದಿಲ್ಲದೆ ಮಹಿಳೆಯರು ವಿಕ್ರಮ ಸಾಧಿಸುತ್ತಿದ್ದಾರೆ. ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಸುರೇಖಾ ಆಚಾರ್ಯ ಈ ಸಾಲಿನ ಮತ್ತೊಂದು ಪ್ರತಿಭೆ. ಪಾತ್ರ, ಅರ್ಥಗಾರಿಕೆ, ಭಾಗವತಿಕೆ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವಂತೆಯೇ ಇದೀಗ ಸುರೇಖಾ ಆಚಾರ್ಯ ಪ್ರಸಂಗಕರ್ತೆಯಾಗಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ.
ಸುರೇಖಾ ಅವರು 'ಸಾಗರಿ ಸಾಮುದ್ರಿಕಾ' ಎಂಬ ವಿಶಿಷ್ಟ ಪ್ರಸಂಗವನ್ನು ಛಂದೋಬದ್ಧವಾಗಿ ರಚಿಸಿದ್ದು, ಸಾಲಿಗ್ರಾಮ ಮೇಳ ಈ ಬಾರಿಯ ತಿರುಗಾಟದ ನೂತನ ಕಲಾ ಕಾಣಿಕೆಯಾಗಿ ಆಯ್ಕೆ ಮಾಡಿ ಗೌರವಿಸಿದೆ. ಮನುಜ ಕುಲಕ್ಕೆ ಹಣೆಬರಹವನ್ನು ಮೀರಿ ನಿಲ್ಲಲಾಗದು. ಹುಟ್ಟು ಸಾವಿನ ನಡುವಿನ ಬದುಕು ವಿಧಿ ಲಿಖಿತ ಎಂಬ ಸಂದೇಶ ಸಾರುವ ಈ ಕಥಾಭಾಗ ಮೊದಲ ಪ್ರಯೋಗ ದಲ್ಲೇ ಯಶಸ್ಸು ಕಂಡಿದೆ. ಹೆಣ್ಮಗಳೊಬ್ಬರು ಕಟ್ಟಿದ ಈ ಪ್ರಸಂಗದಲ್ಲಿ ಸಾಗರಿ ಮತ್ತು ಸಾಮುದ್ರಿಕಾ ಎಂಬ ಮಹಿಳೆಯರಿಬ್ಬರ ಬದುಕು ತೆರೆದುಕೊಳ್ಳುವುದು ವಿಶೇಷ.
ಎಲ್ಲರ ಜಾತಕ ಫಲಗಳನ್ನು ನೋಡುತ್ತಾ ಪರಿಹಾರ ಸೂಚಿಸುವ ಪುಟ್ಟಣ್ಣ ಜೋಯಿಸರು ನಿತ್ಯ ವ್ಯವಹಾರದಲ್ಲಿ ಮಗ್ನರಾಗಿ ಪತ್ನಿಯ ಆಸೆ ಆಕಾಂಕ್ಷೆಗಳನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಆಕೆ ಪರಸಂಗವನ್ನು ಅಪೇಕ್ಷಿಸುವ ಸಮಕಾಲೀನ ಬದುಕಿನ ಕಥೆ ಇದು. ಆದರೆ, ನಂಬಿದಾತ ಕೈಕೊಟ್ಟಾಗ ಆಕೆಯ ಬದುಕು ನಾಯಿಪಾಡಾಗುತ್ತದೆ. ಕಾಮನೆಗಳಿಗೆ ನಿಯಂತ್ರಣ ಬೇಕು, ಅರಿತು ಬಾಳಿದರೆ ಬದುಕು ಹಸನಾದೀತು, ಇಲ್ಲವಾದರೆ, ವ್ಯಸನವಾದೀತು ಎನ್ನುವುದು ಅಂತಮ ಸಂದೇಶ.
ಜಿ. ರಾಘವೇಂದ್ರ ಮಯ್ಯ, ರಾಮಕಷ್ಣ ಹೆಗಡೆ ಹಿಲ್ಲೂರು, ಉದಯ ಕುಮಾರ್ ಬಾರ್ಕೂರ್ ಭಾಗವತಿಕೆ, ಶಿವಾನಂದ ಕೋಟ, ರಾಮ ಭಂಡಾರಿ ಕರ್ಕಿ ಚೆಂಡೆ, ಪರಮೇಶ್ವರ ಭಂಡಾರಿ ಕರ್ಕಿ, ನಾಗರಾಜ ಭಂಡಾರಿ ಹೀರೇಬೆಲು ಮದ್ದಳೆಯಲ್ಲಿ ಸುರೇಖಾ ಆಚಾರ್ಯ ರಚಿತ ಹಾಡುಗಳು ವೈಭವದಿಂದ ಮೆರೆದವು. ಶಶಿಕಾಂತ್ ಶೆಟ್ಟಿ ಕಾರ್ಕಳ, ಶಂಕರ್ ದೇವಾಡಿಗ ಉಳ್ಳೂರು, ಗೋವಿಂದ ಮೊಗವೀರ ವಂಡಾರು, ಉಮೇಶ್ ಶಂಕರನಾರಾಯಣ, ಷಣ್ಮ್ಮುಖ ಜಿ. ಬಿಳಗೋಡು ಸ್ತ್ರೀಪಾತ್ರದಲ್ಲಿ ಮಿಂಚಿದರೆ,
ಹುಡುಗೋಡು ಚಂದ್ರಹಾಸ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ನಾಗರಾಜ ಭಂಡಾರಿ ಗುಣವಂತೆ, ಚಂದ್ರಹಾಸ ಗೌಡ ಹೊಸಪಟ್ಟಣ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಭಾಸ್ಕರ ಬಿಲ್ಲವ ತುಂಬ್ರಿ, ಹಾಸ್ಯಗಾರ ಮೂರೂರು ರಮೇಶ್ ಭಂಡಾರಿ ಮೊದಲಾದ ಪ್ರಬುದ್ಧ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದರು. ಭಾಗವತಿಕೆ, ಅರ್ಥಗಾರಿಕೆ, ಕುಣಿತ ಸೇರಿದಂತೆ ಯಕ್ಷಗಾನದ ಸರ್ವಾಂಗಗಳಿಗೆ ಸೂಕ್ತವಾಗುವಂತೆ ಪ್ರಸಂಗ ರಚನೆ ಸುರೇಖಾ ಅವರಿಂದ ರಚಿತವಾಗಿದ್ದು ಎಲ್ಲರ ಗಮನ ಸೆಳೆಯಿತು.
ಯಾರೀ ಪ್ರಸಂಗಕರ್ತೆ?: ಸುರೇಖಾ ಆಚಾರ್ಯ ಅವರು ಕಾರ್ಕಳ ತಾಲೂಕಿನ ಮಿಯಾರಿ ನವರು. ಪ್ರಸ್ತುತ ರೆಂಜಾಳ ಗ್ರಾಪಂ ಕಾರ್ಯದರ್ಶಿಯಾಗಿ, ಕುಕ್ಕುಂದೂರು ಗ್ರಾಪಂನ ಲೆಕ್ಕಸಹಾಯಕಿ. ಇದು ಇವರ ಪ್ರಪ್ರಥಮ ಯಕ್ಷಗಾನ ಪ್ರಸಂಗ.
ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಯಕ್ಷಗಾನದ ಸೆಳೆತಕ್ಕೆ ಬಿದ್ದು ಕಲೆಯನ್ನು ಮೈಗೂಡಿಸಿಕೊಂಡ ಇವರು, ಹಾಲಾಡಿ, ಕಮಲಶಿಲೆ, ಸೌಕೂರು, ಅಮೃತೇಶ್ವರಿ ಮತ್ತಿತರು ಯಕ್ಷಗಾನ ಮೇಳದಲ್ಲಿ ವೇಷ ತೊಟ್ಟು ಮಿಂಚಿದವರು. ಯಕ್ಷಗಾನದ ಜತೆ ನಾಟಕ, ಕವನ, ಸಂಗೀತವನ್ನು ಮೈಗೂಡಿಸಿಕೊಂಡಿರುವ ಅವರು ಶಾಕುಂತಳಾ ಪರಿತ್ಯಾಗ ಹಾಗೂ ಭಕ್ತ ಧ್ರುವ ಪೌರಾಣಿಕ ನಾಟಕವನ್ನು ಬರೆದು ನಿರ್ದೇಶಿಸಿ ಅಭಿನಯಿಸಿದ ಪ್ರತಿಭಾನ್ವಿತೆ. ಅಲ್ಲದೆ ಅನೇಕ ಪ್ರಶಸ್ತಿ ಪುರಸ್ಕಾರವನ್ನು ಪಡೆದಿದ್ದಾರೆ.
ಮಿಯಾರಿನ ಚೆಲುವಯ್ಯ ಆಚಾರ್ ಮಹಾನ್ ಯಕ್ಷಪ್ರೇಮಿ. ಕೆಲವು ದಶಕಗಳ ಹಿಂದೆ ಬಹುತೇಕ ಹೆಚ್ಚಿನ ಮೇಳಗಳ ಮೊದಲ ಪ್ರಯೋಗ ಇವರದೇ ಅಂಗಳದಲ್ಲಿ ನಡೆಯುತ್ತಿತ್ತು. ಇಂಥ ಯಕ್ಷಪೋಷಕರ ಮೊಮ್ಮಗಳೇ ಸುರೇಖಾ ಆಚಾರ್ಯ. 'ನಾಲ್ಕನೇ ಕ್ಲಾಸ್ನಲ್ಲೇ ಪಾತ್ರ ಮಾಡುತ್ತಿದ್ದೆ. ಪ್ರಸಂಗ ಬರೀಬೇಕು ಅಂತ ಆಸೆ ಇತ್ತು. ಈಗ ಕೈಗೂಡಿದೆ. - ಸುರೇಖಾ ಆಚಾರ್ಯ, ಪ್ರಸಂಗಕರ್ತೆ
ಕೃಪೆ :
http://www.vijaykarnataka.com
|
|
|